ರಾಜ್ಯದಲ್ಲಿ ಮುಂದಿನ 3 ದಿನ ವರುಣನ ಆರ್ಭಟ: ಕರಾವಳಿಯಲ್ಲಿ ಗಾಳಿ ಸಹಿತ ಮಳೆಯ ಎಚ್ಚರಿಕೆ!

ಭಾರತೀಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಮೊನ್ನೆ ಮೊನ್ನೆಯಷ್ಟೇ ಸುರಿದ ಮಳೆಯು ಬೆಂಗಳೂರಿನಲ್ಲಿ 10 ಜನರ ಜೀವ ತೆಗೆದಿತ್ತು. ಕೇವಲ ಅರ್ಧ ಗಂಟೆ ಸುರಿದ ಮಳೆಯು ದೊಡ್ಡಮಟ್ಟದ ರಾದ್ಧಾಂತವನ್ನೇ ಮಾಡಿತ್ತು. ಇದಾದ ಬಳಿಕ ಮತ್ತೆ ಕರಾವಳಿ ಸೇರಿದಂತೆ ನಾಡಿನಾದ್ಯಂತ ಬಿಸಿಲ ತಾಪ ಜನರನ್ನು ಹೈರಾಣಾಗಿಸಿದೆ. ಬೀದರ್​ನಲ್ಲಂತೂ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್​ ತಲುಪಿದೆ. ಈ ಎಲ್ಲದರ ನಡುವೆ ಇದೀಗ ಭಾರತೀಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಇದು ಕೇವಲ ಸಾಧಾರಣ ಮಳೆಯಲ್ಲ, ಗುಡುಗು ಮತ್ತು ಮಿಂಚಿನ ಆರ್ಭಟವೂ ಇರಲಿದ್ದು, ಜನರಿಗೆ ಬಿಸಿಲಿನಿಂದ ಕೊಂಚ ವಿರಾಮ ಸಿಗುವ ಭರವಸೆ ಮೂಡಿದೆ.ಯಾವ ಜಿಲ್ಲೆಗಳಿಗೆ ‘ವರುಣ’ನ ಕೃಪೆ ಅನ್ನೋದನ್ನ ನೋಡೋದಾದ್ರೆ ವಿಶೇಷವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ವರುಣನ ಸಿಂಚನವಾಗಲಿದೆ. ಕರಾವಳಿ ಭಾಗದ ಕೆಲವು ಕಡೆಗಳಲ್ಲೂ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಪ್ಯಾರಾಮೆಡಿಕಲ್ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಕಡ್ಡಾಯವಲ್ಲ! ವಿದ್ಯಾರ್ಥಿಗಳ ಹಿತ ಕಾಯಲು ಕೋರ್ಟ್ ಮಹತ್ವದ ನಿರ್ಧಾರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ರಾತ್ರಿ ವೇಳೆಯೂ ಉಷ್ಣಾಂಶ ಹೆಚ್ಚಾಗಿತ್ತು. ಈಗ ಹವಾಮಾನ ಇಲಾಖೆಯ ವರದಿ ಪ್ರಕಾರ, ಸಂಜೆ ಅಥವಾ ರಾತ್ರಿಯ ವೇಳೆ ನಗರದ ಹಲವೆಡೆ ಮಳೆಯಾಗುವ ಲಕ್ಷಣಗಳಿದ್ದು, ನಗರದ ವಾತಾವರಣ ಮತ್ತೆ ತಂಪಾಗುವ ನಿರೀಕ್ಷೆಯಿದೆ. ರೈತರು ಹಾಗೂ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಸಾರ್ವಜನಿಕರಿಗೆ ಈ ಮಳೆ ತುಸು ಸಮಾಧಾನ ತರುವುದರಲ್ಲಿ ಸಂಶಯವಿಲ್ಲ.

Exit mobile version