ಸುಡುವ ಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಉತ್ತರ ಕರ್ನಾಟಕದಲ್ಲಿ 40 ಡಿಗ್ರಿ ಮೀರಿದ ತಾಪಮಾನ

ರಾಜ್ಯದಲ್ಲಿ ಈ ಬಾರಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕ ಭಾಗಗಳಲ್ಲಿ ತಾಪಮಾನ 41 ಡಿಗ್ರಿ ಸೆಲ್ಸಿಯಸ್​ನಷ್ಟು ಏರಿಕೆ ಕಂಡಿದ್ದು ಮನೆಯಿಂದ ಹೊರಬರಲು ಜನತೆ ಯೋಚಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಈ ಎಲ್ಲದರ ನಡುವೆ ಇಂದೂ ಕೂಡ ರಾಜ್ಯದಲ್ಲಿ ಸೂರ್ಯನ ಶಾಖ ಮಿತಿಮೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ರಾಜ್ಯದ ಜನತೆಗೆ ಮತ್ತಷ್ಟು ಆತಂಕ ತಂದಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಇಂದು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಮಿತಿಮೀರಿ ಹೋಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಸಂಜೆಯ ವೇಳೆಗೆ ವರುಣನ ಸಿಂಚನವಾಗಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಬಿಸಿಲ ಧಗೆ ಮಿತಿಮೀರಿ ಹೋಗಿದ್ದು, ಇಂದು ತಾಪಮಾನ 38 ಡಿಗ್ರಿ ಸೆಲ್ಸಿಯಸ್​ ತಲುಪಲಿದೆ ಎಂದು ಹವಾಮಾನ ಇಲಾಕೆ ತಿಳಿಸಿದೆ.
ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರದಲ್ಲಿ ಬಿಸಿಲು ಕೆಂಡಕಾರಲಿದೆ. ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ತಾಪಮಾನ 41°C ದಾಟಲಿದ್ದು, ಬಿಸಿಗಾಳಿಯ ಪ್ರಭಾವವಿರಲಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಕಲ್ಚೆರ್ಪೆಯಲ್ಲಿ ಬಾವಿಗೆ ಬಿದ್ದಿದ್ದ ಕಾಡಾನೆ ಯಶಸ್ವಿ ರಕ್ಷಣೆ

ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಭಾಗಗಳಲ್ಲಿ ತಾಪಮಾನ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್​ ಇದ್ದರೂ ಸಹ, ತೇವಾಂಶದ ಕೊರತೆಯಿಂದ ಅತೀವ ಸೆಖೆಯ ವಾತಾವರಣವನ್ನು ಈ ಭಾಗದ ಜನತೆ ಇಂದು ಅನುಭವಿಸಲಿದ್ದಾರೆ .ಸಂಜೆ ವೇಳೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Exit mobile version