ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರನ ಕಾರು ಚಾಲಕನ ಮೇಲೆ ಚಾಕು ಇರಿತವಾಗಿರುವಂತಹ ಘಟನೆಯು ಬೆಳಗಾವಿ ನಗರದ ಕ್ಲಬ್​ ರಸ್ತೆಯಲ್ಲಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಸವಂತ ಕಡೋಲ್ಕರ್​ (32) ಎಂಬವರ ಮೇಲೆ ಚಾಕು ಇರಿತವಾಗಿದೆ.
ಚಾಕು ಇರಿತಕ್ಕೆ ಒಳಗಾಗಿರುವ ಬಸವಂತ ಕಡೋಲ್ಕರ್​​ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಹೆಬ್ಬಾಳ್ಕರ್​ ಅವರ ಕಾರು ಚಾಲಕ ಎನ್ನಲಾಗಿದೆ. ಬಸವಂತ ಕಾರು ನಿಲ್ಲಿಸಿ ಕಾರಿನಿಂದ ಕೆಳಗಿಳಿದ ಸಂದರ್ಭದಲ್ಲಿ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಬಸವಂತ ಎದೆ, ಭುಜ, ತೊಡೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: ಯಲ್ಲಾಪುರ ರಂಜಿತಾ ಹತ್ಯೆ ಪ್ರಕರಣ: ಕಾಡಿನಲ್ಲಿ ಆರೋಪಿ ರಫೀಕ್ ಶವ ಪತ್ತೆ, ಆತ್ಮಹತ್ಯೆ ಶಂಕೆ

ಗಾಯಗೊಂಡಿರುವ ಬಸವಂತರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಡಿಸಿಪಿ, ಎಸಿಪಿ ಹಾಗೂ ಮೃಣಾಲ್​ ಹೆಬ್ಬಾಳ್ಕರ್ ಕೂಡ ಆಗಮಿಸಿ ಬಸವಂತರ ಆರೋಗ್ಯ ವಿಚಾರಿಸಿದ್ದಾರೆ. ಬೆಳಗಾವಿಯ ಕ್ಯಾಂಪ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಪೊಲೀಸರು ಈ ಕೃತ್ಯದ ಹಿಂದಿನ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version