ಆಸ್ಸಾಂ ಕಾರ್ಮಿಕರ ಮೇಲೆ ನೈತಿಕ ಪೊಲೀಸ್​ಗಿರಿ ಪ್ರದರ್ಶನ : ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಎಫ್​ಐಆರ್​

ಬಾಂಗ್ಲಾ ವಲಸಿಗರ ಪತ್ತೆ ವಿಚಾರದಲ್ಲಿ ನೈತಿಕ ಪೊಲೀಸ್​ಗಿರಿ ತೋರಿರುವ ಆರೋಪದ ಅಡಿಯಲ್ಲಿ ಬಜರಂಗದಳದ 9 ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾದ ಘಟನೆಯು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಸಂಭವಿಸಿದೆ. ಹಿಂದೂಪರ ಕಾರ್ಯಕರ್ತರ ವಿರುದ್ಧ ಮೂಡಿಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ಆಶ್ರಯ ಪಡೆದಿದ್ದಾರೆ ಎಂಬ ಅನುಮಾನ ಬಂದ ಹಿನ್ನೆಲೆಯಲ್ಲಿ ಆಸ್ಸಾಂ ಕಾರ್ಮಿಕರ ಆಧಾರ್​ ಕಾರ್ಡ್ ಪರಿಶೀಲನೆ ಕಾರ್ಯವನ್ನು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತರು ಮಾಡಿದ್ದರು. ಈ ಸಂಬಂಧ ಇದೀಗ ಮೂಡಿಗೆರೆ ಪೊಲೀಸ್​ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಬಾಂಗ್ಲಾ ದೇಶದಲ್ಲಿ ದೀಪು ಬರ್ಬರ ಹತ್ಯೆ ಪ್ರಕರಣದ ಬಳಿಕ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇರುವ ಆಸ್ಸಾಂ ಕಾರ್ಮಿಕರ ಆಧಾರ್​ ಪರಿಶೀಲನೆ ನಡೆಸುವಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಪತ್ರಿಕಾಗೋಷ್ಠಿ ನಡೆಸಿ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣದ ವಾರದ ಸಂತೆಗೆ ಏಕಾಏಕಿ ಬಂದ ಕಾರ್ಯಕರ್ತರು ಆಸ್ಸಾಂ ಮೂಲದ ಕಾರ್ಮಿಕರ ಆಧಾರ್​ ಕಾರ್ಡ್ ಪರಿಶೀಲಿಸಿದ್ದರು.

ಇದನ್ನೂ ಓದಿ: ಯಲ್ಲಾಪುರ ರಂಜಿತಾ ಹತ್ಯೆ ಪ್ರಕರಣ: ಕಾಡಿನಲ್ಲಿ ಆರೋಪಿ ರಫೀಕ್ ಶವ ಪತ್ತೆ, ಆತ್ಮಹತ್ಯೆ ಶಂಕೆ

ಆಧಾರ್​ ಕಾರ್ಡ್ ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆಗೆ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಒಂದು ವಾರಗಳ ಗಡುವು ನೀಡಿತ್ತು. ಆದರೆ ಈ ಬಗ್ಗೆ ಎರಡೂ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಾರ್ಯಕರ್ತರೇ ನೈತಿಕ ಪೊಲೀಸ್​ ಗಿರಿ ಪ್ರದರ್ಶಿಸಿದ್ದರು. ಈ ಸಂಬಂಧ ಇದೀಗ 9 ಮಂದಿ ಹಿಂದೂಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

Exit mobile version