‘ಕಣ್ಣೀರು ಸುರಿಸಬೇಡ, ನಿನ್ನೊಂದಿಗೆ ನಾನಿರುವೆ’ : ನೇಮ ಸೇವೆಯಲ್ಲಿ ರಿಷಭ್​ ಶೆಟ್ಟಿಗೆ ದೈವದ ಅಭಯ

ಕಾಂತಾರ ಚಾಪ್ಟರ್​ 1 ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಚಿತ್ರತಂಡ ಸಮೇತರಾಗಿ ಬಂದು ದೈವಕ್ಕೆ ಹರಕೆ ತೀರಿಸಿದ್ದಾರೆ. ಮಂಗಳೂರಿನ ಬಾರೆಬೈಲ್​ ವರಾಹ ಪಂಜುರ್ಲಿ, ಜಾರಂದಾಯ ಹಾಗೂ ಬಂಟ ದೈವಸ್ಥಾನದಲ್ಲಿ ದೈವಗಳಿಗೆ ಚಿತ್ರತಂಡ ಹರಕೆ ನೇಮ ನಡೆಸಿದೆ.

ಪತ್ನಿ ಹಾಗೂ ಮಕ್ಕಳ ಜೊತೆಯಲ್ಲಿ ರಿಷಭ್​ ಶೆಟ್ಟಿ ನೇಮೋತ್ಸವಕ್ಕೆ ಹಾಜರಾಗಿದ್ದರೆ, ಇತ್ತ ಹೊಂಬಾಳೆ ಫಿಲ್ಮ್ಸ್​ ಮಾಲೀಕ ವಿಜಯ್​ ಕಿರಂಗೂರು, ನಿರ್ದೇಶಕ ಸಂತೋಷ್​ ಆನಂದ ರಾಮ್​ ಸೇರಿದಂತೆ ಚಿತ್ರತಂಡದ ಅನೇಕರು ಈ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಕಳೆದ ಏಪ್ರಿಲ್​ ತಿಂಗಳಲ್ಲಿ ಇದೇ ದೈವಸ್ಥಾನದ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ ಹಾಗೂ ಕುಟುಂಬ ಅನ್ನಸಂತರ್ಪಣೆ ಹಾಗೂ ಗಗ್ಗರ ಸೇವೆ ನೀಡಿದೆ.

ಇದನ್ನೂ ಓದಿ: ನಿರ್ಧಾರ ತೆಗೆದುಕೊಳ್ಳಲು ಬರಲ್ವಾ ರಕ್ಷಿತಾಗೆ? ಮನೆಯವರೆಲ್ಲಾ ಮುಗಿಬಿದ್ರು ಚಿಕ್ಕ ಹುಡುಗಿ ಮೇಲೆ!

ಕಳೆದ ಬಾರಿ ನೇಮೋತ್ಸವದ ಸಂದರ್ಭದಲ್ಲಿ ಸಂಸಾರದಲ್ಲಿ ಜಾಗರೂಕತೆ ಕಾಪಾಡಿಕೊಳ್ಳುವಂತೆ ದೈವ ನುಡಿ ನೀಡಿತ್ತು. ಅಲ್ಲದೇ ಸಿನಿಮಾ ಕ್ಷೇತ್ರ ಎಂದಮೇಲೆ ಅಲ್ಲಿ ಶತ್ರುಗಳು ಇರುವುದು ಸಹಜ. ಎಚ್ಚರಿಕೆಯಿಂದ ಇರಬೇಕು. ಹರಕೆ ಏನಾದರೂ ಕಟ್ಟಿಕೊಂಡಿದ್ದರೆ ಅದನ್ನು ಕೊಟ್ಟುಬಿಡು ಎಂದು ರಿಷಭ್​ಗೆ ದೈವ ಸೂಚನೆ ನೀಡಿತ್ತು. ಇದೀಗ ಕಾಂತಾರ ಚಾಪ್ಟರ್​ 1 ಅದ್ಧೂರಿ ಯಶಸ್ಸಿನ ಬೆನ್ನಲ್ಲೇ ರಿಷಬ್​ ಶೆಟ್ಟಿ ಹರಕೆ ಸಲ್ಲಿಕೆ ಮಾಡಿದ್ದಾರೆ.
ಕೋಲಸೇವೆಯ ಸಂದರ್ಭದಲ್ಲಿ ರಷಭ್​ ಶೆಟ್ಟಿಯನ್ನು ಆಲಂಗಿಸಿದ ಪಂಜುರ್ಲಿ ದೈವ, ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ ಎಂದು ಹೇಳಿದೆ. ಬಳಿಕ ರಿಷಬ್​ ಶೆಟ್ಟಿ ಮಡಿಲಲ್ಲಿ ಮಲಗಿ ಮಮಕಾರ ತೋರಿದೆ.

ಕೋಲಕ್ಕೂ ಮುನ್ನ ಕಾಂತಾರ ಚಿತ್ರತಂಡ ವರಾಹಿ ಪಂಜುರ್ಲಿಗೆ ಉಗ್ರದ ಎಣ್ಣೆಬೂಲ್ಯ ಸೇವೆ ನೀಡಿದೆ. ಎಣ್ಣೆಬೂಲ್ಯದ ಸಂದರ್ಭದಲ್ಲಿ ರಿಷಬ್​ ಹಾಗೂ ಕಾಂತಾರ ನಿರ್ಮಾಪಕ ವಿಜಯ್​ ಕಿರಗಂದೂರಿಗೆ ದೈವ ಅಭಯ ನೀಡಿದೆ. ವೀಳ್ಯ ಶಕುನದ ಮೂಲಕ ದೈವ ಸಂತುಷ್ಠ ಎಂದು ಸೂಚನೆ ನೀಡಿದೆ.

ಕಾಂತಾರ ಸಿನಿಮಾದ ಬಳಿಕ ರಿಷಬ್​ ಶೆಟ್ಟಿ ಸಾಕಷ್ಟು ಪರ – ವಿರೋಧಗಳನ್ನು ಎದುರಿಸುತ್ತಿದ್ದಾರೆ. ರಿಷಭ್​ ಶೆಟ್ಟಿ ದೈವ ನರ್ತಕರಿಗೆ ಹೊಸ ಖ್ಯಾತಿ ದೊರಕಿಸುವಂತೆ ಮಾಡಿದ್ದಾರೆ ಎಂದು ವಾದಿಸುವವರು ಒಂದಡೆಯಾದರೆ ಕಾಂತಾರ ಸಿನಿಮಾದಿಂದ ದೈವಗಳಿಗೆ ಅಪಚಾರವಾಗುತ್ತಿದೆ ಎಂದು ವಿರೋಧಿಸುವ ಮತ್ತೊಂದು ಬಣವಿದೆ. ಇದೀಗ ದೈವವೇ ನಾನು ನಿನ್ನೊಂದಿಗೆ ಇದ್ದೇನೆ ಎಂದು ನುಡಿ ನೀಡಿದ್ದು ರಿಷಬ್​​ ಶೆಟ್ಟಿಗೆ ರಿಲೀಫ್​ ದೊರಕಿದಂತಾಗಿದೆ.

Exit mobile version